Monday, August 8, 2011

ಭಾರತ ಚುನಾವಣಾ ಸುಧಾರಣೆಯ ಅವಶ್ಯಕತೆ

ಭಾರತ ದೇಶದಲ್ಲಿ 64ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿ ಸಂಭ್ರಮಿಸುವ ಸಮಯದಲ್ಲಿ ಪ್ರಜಾಪ್ರಭುತ್ವಕ್ಕೆ ಪ್ರಬಲವಾಗಿ ಪೆಟ್ಟಾಗಿರುವುದರಲ್ಲಿ ಇತ್ತೀಚಿನ ಕೇಂದ್ರ ಹಾಗು ಇತರ ರಾಜ್ಯ ರಾಜಕೀಯ ಬೆಳವಣಿಗೆಗಳಲ್ಲಿ ಮೂಡಿದ ಭಾರಿ ಘಟನಾವಳಿಗಳು ಹಾಗು ಕಾರ್ಯವೈಖರಿಗಳು. ಇಂದು ಇಡೀ ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡಲು ಸಕಾರಣವೆಂದರೆ ಅದು ಭ್ರಷ್ಟ ರಾಜಕೀಯ ಮುಖಂಡರುಗಳಿಂದಲೆ. ರಾಜ್ಯದಲ್ಲಿ ನಡೆದ ಗಣಿಹಗರಣ, ಭೂ ಕಬಳಿಕೆ, ಕೇಂದ್ರದಲ್ಲಿ ತುಳುಕುತ್ತಿರುವ 2ಜಿ ಸ್ಪೆಕ್ಟ್ರಂ ಹಗರಣ, ಕಾಮನ್ ವೆಲ್ತ್ ಹಗರಣಗಳು ಮತ ಚಲಾಯಿಸುವ ಸಾರ್ವಜನಿಕರಿಗೆ ಘಾಸಿಯನ್ನುಂಟುಮಾಡಿದೆ. ಯಥಾ ರಾಜ ತಥಾ ಪ್ರಜಾ ಎಂಬ ನಾಣ್ಣುಡಿಯಂತೆ ರಾಜಕೀಯ ಮುಖಂಡರಿಂದ ಹಿಡಿದು ಕಛೇರಿಯಲ್ಲಿ ಕೆಲಸ ಮಾಡುವ ಗುಮಾಸ್ತನವರೆಗು ಭ್ರಷ್ಟಾಚಾರ ಎದೆ ಸೆಟೆದು ನಿಂತಿದೆ. ಅಣ್ಣಾ ಹಜಾರೆಯವರ ಜನಲೋಕಪಾಲ್ ಮಸೂದೆಯು ಎಷ್ಟರ ಮಟ್ಟಿಗೆ ಕಾರ್ಯಪ್ರವೃತ್ತವಾಗುತ್ತದೋ ಆ ಭಾರತಮಾತೆಯೇ ಬಲ್ಲಳು.

ಭ್ರಷ್ಟಾಚಾರದ ಜೊತೆಗೆ ರಾಜಕಾರಣಿಗಳ ಕ್ರಿಮಿನಲ್ ಮೊಕದ್ದಮೆಗಳು ಕೂಡ ಹೆಚ್ಚುತ್ತಿವೆ, ಆಶ್ಚರ್ಯಕರ ಹಾಗು ಅಪಾಯಕರವೆನಿಸುವಂತೆ ನಮ್ಮ ದೇಶದಲ್ಲಿ 543 ಸಂಸತ್ ಸದಸ್ಯರಲ್ಲಿ 158 ಸದಸ್ಯರು ಕ್ರಿಮಿನಲ್ ಮೊಕದ್ದಮೆಗಳಲ್ಲಿ ದಾಖಲಾಗಿದ್ದಾರೆ. ಕಳವಳಕಾರಿಯಾದ ವಿಷಯವೆಂದರೆ 543ರಲ್ಲಿ 74 ಸದಸ್ಯರು ಕೊಲೆ ಹಾಗು ಅಪಹರಣ ಮೊಕದ್ದಮೆಗಳಲ್ಲಿ ದಾಖಲಾಗಿದ್ದಾರೆ. 500ಕ್ಕೂ ಹೆಚ್ಚು ಮೊಕದ್ದಮೆಗಳಲ್ಲಿ ದಾಖಲಾಗಿರುವ ನಮ್ಮ ಸಂಸತ್ ಸದಸ್ಯರು ಸಕಲ ವರ್ಣಸಮೂಹ ರಾಜಕಾರಣದಿಂದ ಬಂದವರಾಗಿದ್ದಾರೆ. ಚುನಾವಣಾ ಸಂಖ್ಯಾಸಂಗ್ರಹಣದ ಪ್ರಕಾರ 205 ಸಂಸತ್ ಸದಸ್ಯರುಗಳಲ್ಲಿ 12 ಸದಸ್ಯರು ಈಗಿನ ಆಡಳಿತ ಪಕ್ಷವಾದ ಕಾಂಗ್ರೆಸ್ ಪಕ್ಷದವರಾಗಿದ್ದು ಕ್ರಿಮಿನಲ್ ಮೊಕದ್ದಮೆ ಅರೋಪದಲ್ಲಿ ಸಿಕ್ಕಿಬಿದ್ದಿದ್ದಾರೆ. ಬಿ.ಜೆ.ಪಿ ಸರಕಾರವು ಕೂಡ ಇದರಲ್ಲ್ಲಿ ಹೊರತಾಗಿಲ್ಲ 116 ಸದಸ್ಯರಲ್ಲಿ 19 ಶಾಸಕರು ಕ್ರಿಮಿನಲ್ ಕೇಸ್ ಗಳಲ್ಲಿ ಭಾಗಿಯಾಗಿದ್ದಾರೆ.ಅಸ್ಪೃಶ್ಯರಿಗೆ ಹಾಗು ಬಡವರಿಗೆ ಶ್ರದ್ಧಾಭಕ್ತಿಯನ್ನು ತೋರುತ್ತೇವೆ ಎಂದು ಹೇಳಿ ಶೇಖಡ 60% ಶಾಸಕರುಗಳು ಸಮಾಜವಾದಿ ಪಾರ್ಟಿ ಹಾಗು ಬಹುಜನ್ ಸಮಾಜ್ ಪಾರ್ಟಿಗಳಿಂದ ಬಂದವರಾಗಿದ್ದು ಕ್ರಿಮಿನಲ್ ಕೇಸ್ ಗಳಲ್ಲಿ ಭಾಗಿಯಾಗಿದ್ದಾರೆ.

ಗಣನೀಯ ವಿಷಯವೆಂದರೆ ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಕೂಡ ಮತ-ಖರೀದಿ ಆರೋಪಗಳು ಕೂಡ ಅತಿರೇಕವಾಗಿ ಸಕಲ ಪಾರ್ಟಿಗಳಿಂದ ನಡೆಯುತ್ತಿವೆ. ಚುನಾವಣಾ ಆಯೋಗವು ಸುಮಾರು 60 ಕೋಟಿ ರೂಪಾಯಿಯನ್ನು ನಗದು ಮುಖಾಂತರ ವಶಪಡಿಸಿಕೊಂಡಿದ್ದು ಹೆಚ್ಚಾಗಿ ತಮಿಳುನಾಡಿನಲ್ಲಿ ಏಪ್ರಿಲ್ ನಲ್ಲಿ ನಡೆದ ಚುನಾವಣೆಗೆ ಸಂಗ್ರಹಿಸಿಟ್ಟ ಹಣವೆಂದು ತಿಳಿದುಬಂದಿದೆ.

ಪಕ್ಷದ ಅಭ್ಯರ್ಥಿಯು ಪ್ರಚಾರಕ್ಕಾಗಿ ಶೇಖಡ 45% ರಿಂದ 55% ವೆಚ್ಚಮಾಡಿ ಹಣವನ್ನು ಪೋಲುಮಾಡುತ್ತಿದ್ದಾರೆ, 2009 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗೆ ಬಹುತೇಕವಾಗಿ 6,753 ಅಭ್ಯರ್ಥಿಗಳು ಶೇಖಡ 45% ರಿಂದ 55% ವೆಚ್ಚಮಿತಿ ಮೀರಿ ಖರ್ಚುಮಾಡಿದ್ದಾರೆ.

ಮೇಲಿನ ಅಂಶಗಳನ್ನು ಗಮನಿಸಿದರೆ ಭಾರತ ದೇಶದಲ್ಲಿ ಪ್ರಜಾಪ್ರಭುತ್ವ ಗಂಭೀರವಾಗಿ ಕ್ರಮಗೆಟ್ಟಿರುವಂತೆ ಕಾಣುತ್ತಿದೆ. ಮತ ಬಾಂಧವರು ಹಾಗು ಸಾರ್ವಜನಿಕರು ನಂಬುವಂತೆ ನಮ್ಮ ದೇಶಕ್ಕೆ ತುರ್ತಾಗಿ ಚುನಾವಣಾ ಸುಧಾರಣೆಗಳ ಅಗತ್ಯವಿದೆ.

ಭಾರತದ ಅತ್ಯಂತ ಗೌರವಾನ್ವಿತವಾದ ಚುನಾವಣಾ ಸಮಿತಿಯ "ಅಸೋಸಿಯೇಷನ್ ಫಾರ್ ಡೆಮೊಕ್ರ್ಯಾಟಿಕ್ ರಿಫಾರ್ಮ್ಸ್" (www.adrindia.org) ಭಾರತದ ರಾಜಕೀಯವನ್ನು ಸ್ವಚ್ಛಗೊಳಿಸಲು ಹಾಗು ಭ್ರಷ್ಟಾಚಾರವನ್ನು ತೊಲಗಿಸಲು ಕೆಳಗಿನ ಅಂಶಗಳನ್ನು ಪುಷ್ಟೀಕರಿಸುತ್ತವೆ.
  • ಅಭ್ಯರ್ಥಿಯು ಗಂಭೀರವಾದಂತಹ ಮುಖ್ಯವಾಗಿ ಕೊಲೆ, ಅತ್ಯಾಚಾರ, ಅಪಹರಣ, ಸುಲಿಗೆ ಇತ್ಯಾದಿ ಅಪರಾಧಗಳಲ್ಲಿ ತೊಡಗಿದ್ದರೆ ಚುನಾವಣೆಗಳಿಂದ ನಿಷೇಧಿಸುವುದು ಸೂಕ್ತ.ಅಭ್ಯರ್ಥಿಯು ಅಪರಾಧಿ ಎಂದು ಸಾಬೀತಾದ ಪಕ್ಷದಲ್ಲಿ ಕಾನೂನು ರೀತ್ಯಾ ಎರಡು ವರ್ಷ ಕಠಿಣ ಶಿಕ್ಷೆಗೆ ಒಳಗಾಗಬೇಕು ಹಾಗು ಚುನಾವಣೆಯನ್ನು ಸ್ಪರ್ಧಿಸಲು ಅನುವುಮಾಡಿಕೊಡಬಾರದು.
  • "ಯಾವುದೇ ಅಭ್ಯರ್ಥಿಗೆ ಮತದಾನ ಚಲಾಯಿಸುವುದಿಲ್ಲ" ಎಂಬ ಆಯ್ಕೆಯನ್ನು ಮತದಾರರಿಗೆ ಅನುವುಮಾಡಿಕೊಡಬೇಕು.
  • ಅಭ್ಯರ್ಥಿಗಳು ಚುನಾವಣೆಯಲ್ಲಿ ಪೋಲು ಮಾಡುವ ವಿಪರೀತ ಹಣದ ಬಳಕೆಯ ವಿರುದ್ಧ ಕಾನೂನು ರಚನೆಯಾಗಬೇಕು.
  • ಸಾಮಾನ್ಯವಾಗಿ ರಾಜಕೀಯ ಪಕ್ಷಗಳು ತಮ್ಮ ವೆಚ್ಚದ ಮಿತಿಯು ಪ್ರಾಮಾಣಿಕವಾಗಿರುವುದಿಲ್ಲ, ಹಾಗಾಗಿ ಸಾರ್ವಜನಿಕರ ಪರಿಶೀಲನೆಗಾಗಿ ಪರಿಶೀಲಿಸಬಹುದಾದಂತಹ ಖಾತೆಗಳನ್ನು ಪಕ್ಷವು ಕೃತ್ರಿಮವಿಲ್ಲದೆ ಪ್ರಕಟಿಸಬೇಕು ಹಾಗು ಸದಾ ದೊರೆಯುವಂತಿರಬೇಕು.
  • ರಾಜಕೀಯ ಪಕ್ಷಗಳು ಜಾತಿ, ಧರ್ಮದ ಆಧಾರದ ಮೇಲೆ ಮತಗಳನ್ನು ಪಡೆಯಲು ನಿಲ್ಲಿಸಬೇಕು. ಒಡಕುಂಟು ಮಾಡುವಂತಹ ಪ್ರಚಾರವನ್ನು ನಿರ್ಬಂಧಿಸಬೇಕು.
ಚುನಾವಣೆ ಸುಧಾರಣೆಯ ಆಸೆ ಹೊಸದಲ್ಲ.1990 ರಿಂದ ಕನಿಷ್ಠ ಏಳು ಬಾರಿಯಾದರು ಸರಕಾರದ ಆಯೋಗಗಳು ಸುಧಾರಣೆ ಹೊಂದಲು ಪ್ರಯತ್ನಿಸುತ್ತಿದೆ, ಭಾರತದ ಚುನಾವಣೆ ಆಯೋಗ 1998ರಿಂದ ಅಭ್ಯರ್ಥಿಗಳ ವಿರುದ್ಧ ಬಾಕಿ ಉಳಿದಿರುವ ಅಪರಾಧ ಪ್ರಕರಣಗಳ ಅಭ್ಯರ್ಥಿಗಳು ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ಹೇಳುತ್ತ ಬಂದಿದೆ ಆದರೆ ಈ ಸುಧಾರಣೆಗಳು ಬಗ್ಗೆ ಅಗಾಧ ಒಮ್ಮತವಿದ್ದರೆ, ಏಕೆ ಸರ್ಕಾರಗಳು ಎರಡು ದಶಕಗಳ ಕಾಲ ಮೇಲೆ ಕುಳಿತು ಸಮಯವನ್ನು ದೂಡುತ್ತಿವೆ? ಸ್ವಾರ್ಥ ರಾಜಕಾರಣಿಗಳನ್ನು ಕೇಳಬೇಕಷ್ಟೆ.

0 Comments:

Post a Comment

Subscribe to Post Comments [Atom]

<< Home